Media Release
Mysuru, March 24, 2025 : The Karnataka Konkani Sahitya Academy, in collaboration with the Konkani Christian Association, organized the 2024 Honorary Awards and Book Awards Ceremony at Konkani Bhavan, Mysuru, on March 23.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ : 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇವರ ಸಹಯೋಗದಲ್ಲಿ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮವನ್ನು 23 ಮಾರ್ಚ್ 2025ರಂದು ಮೈಸೂರಿನ ʼಕೊಂಕಣ್ ಭವನʼದಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದ್ದಕ್ಕೆ ಮತ್ತು ಪುಸ್ತಕ ಪುರಸ್ಕೃತರು ಕನ್ನಡ ಲಿಪಿಯಲ್ಲಿ ಪುಸ್ತಕ ಬರೆದ್ದಕ್ಕೆ ಸಂತೋಷಪಟ್ಟರು. ಕೊಂಕಣಿ ಭಾಷೆಯ ಸಾಹಿತ್ಯ, ಕಲೆ ಇನ್ನು ಬೆಳೆಯಲಿ. ಕೊಂಕಣಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಕೊಡುವಲ್ಲಿ ಸರ್ಕಾರವನ್ನು ವಿನಂತಿಸಿ, ಸರ್ಕಾರದ ಬಳಿ ಮಾತುಕತೆ ನಡೆಸುತ್ತೇನೆಂದು ಭರವಸೆ ನೀಡುವುದರೊಂದಿಗೆ, ಕೊಂಕಣಿ ಭಾಷೆ ಉಳಿಸಲು ಸಹಕಾರ ಕೊಡುತ್ತೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, ನೆರೆದಿರುವ ಎಲ್ಲಾ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಿದ್ದಿ ಸಾಂಸ್ಕೃತಿಕ ಕಲಾತಂಡದಿಂದ ಪ್ರದರ್ಶನವಾಗಬೇಕಿದ್ದ ತಂಡದ ಕಲಾವಿದರೊಬ್ಬರು, ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದರಿಂದ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಹಲವಾರು ಕಥೆ, ಕಾದಂಬರಿ, ಕವನಗಳನ್ನು ಬರೆದು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಪೆಟ್ರಿಕ್ ಕಾಮಿಲ್ ಮೋರಾಸ್, ವಿವಿಧ ಕೊಂಕಣಿ ಸಂಗೀತ ವಾದ್ಯಗಳಲ್ಲಿ ಪರಿಣತಿ ಪಡೆದು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಜೋಯೆಲ್ ಪಿರೇರಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿದ್ದಿ ಸಂಸ್ಕೃತಿಯನ್ನು ಉಳಿಸಿ ಪಸರಿಸಿದ ಶ್ರೀಮತಿ ಸೊಬೀನಾ ಮೋತೇಶ್ ಕಾಂಬ್ರೆಕರ್ ಇವರಿಗೆ ಜಾನಪದ ಕ್ಷೇತ್ರದ ಸಾಧನೆಗಾಗಿ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಶ್ರೀಮತಿ ಫೆಲ್ಸಿ ಲೋಬೊ ಇವರ ʼಪಾಲ್ವಾ ಪೋಂತ್ʼ ಕವಿತಾ ಪುಸ್ತಕಕ್ಕೆ ಹಾಗೂ ಶ್ರೀ ವಲೇರಿಯನ್ ಸಿಕ್ವೇರಾ ಇವರ ʼಶೆತಾಂ ಭಾಟಾಂ ತೊಟಾಂನಿʼ ಲೇಖನ ಪುಸ್ತಕಕ್ಕೆ ಪುಸ್ತಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪುರಸ್ಕೃತರ ಪರವಾಗಿ ಜೋಯೆಲ್ ಪಿರೇರಾ ಹಾಗೂ ಫೆಲ್ಸಿ ಲೋಬೊರವರು ತಮ್ಮ ಅನಿಸಿಕೆಗಳನ್ನು ಹಂಚಿ, ಅಕಾಡೆಮಿಗೆ ಹಾಗೂ ಅವರ ಸಾಧನೆಗೆ ಪ್ರೋತ್ಸಾಹ ನೀಡಿದವರಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇವರು ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕೃತರ ಪರಿಚಯ ಪುಸ್ತಕವನ್ನು ವಿಮೋಚನೆಗೊಳಿಸಿ, ತಮ್ಮ ಮಾತೃಭಾಷೆಯೊಂದಿಗೆ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬಂದ ಎಲ್ಲಾ ಸಾಹಿತಿ, ಕಲಾವಿದರಿಗೆ ಕೃತಜ್ಞತೆ ಕೋರಿದರು. ಕೊಂಕಣಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ವಲೇರಿಯನ್ ಡಿಸೋಜ(ವಲ್ಲಿ ವಗ್ಗ), ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಶ್ರೀ ಜೋನ್ ಡಿಸೋಜ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಜೋಯ್ಸ್ ಸಿಕ್ವೇರಾರವರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಸ್ವಾಗತಿಸಿ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಜೋನ್ ಡಿಸೋಜ ವಂದನಾರ್ಪಣೆ ಸಲ್ಲಿಸಿದರು. ಅಕಾಡೆಮಿ ಸದಸ್ಯೆಯಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಅಕ್ಷತಾ ನಾಯಕ್ ವೇದಿಕೆಯಲ್ಲಿದ್ದರು.
ಆಂಟನಿ ಕೀರ್ತನ್ ಜೇಮ್ಸ್ ಮತ್ತು ತಂಡದಿಂದ ಬ್ರಾಸ್ ಬ್ಯಾಂಡ್, ಎಲ್ರೋನ್ ರೊಡ್ರಿಗಸ್ ಮತ್ತು ತಂಡದಿಂದ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು.